
ನಾಲ್ಕನೆಯ ಶುಭಸಂದೇಶಕಾರ ಕ್ರಿಸ್ತನ ಪುನರುತ್ಥಾನದ ಬಗ್ಗೆ ಪ್ರಸ್ತಾಪಿಸುವಾಗ “ವಾರದ ಮೊದಲನೆಯ ದಿನ” ಎಂದು ಆರಂಭಿಸುತ್ತಾನೆ. ಅವನೇಕೆ ರವಿವಾರ ಅಥವಾ ಭಾನುವಾರವೆಂದು ಹೇಳುವುದಿಲ್ಲ? ಬಹುಶಃ ದೇವರ ಸೃಷ್ಟಿ ಕಾರ್ಯದಲ್ಲಿ ಕಾಲದ ಪ್ರಾರಂಭದಲ್ಲಿ ಮೊದಲನೆಯ ವಾರದ ಮೊದಲ ದಿನದಲ್ಲಿ ಮಾಡಿದ ಕಾರ್ಯದ ಕಡೆ ನಮ್ಮ ಗಮನ ಸೆಳೆಯಲು ಬಯಸಿರಬೇಕು!
ಜಗತ್ತಿನ ಮೊದಲ ದಿನದಲ್ಲಿ ಏನು ನಡೆಯಿತು? ದೇವರು ‘ಬೆಳಕಾಗಲಿ’ ಎಂದು ಮೊದಲಿಗೆ ಬೆಳಕನ್ನು ಸೃಷ್ಟಿಸಿದರು; ಗಮನಿಸಿ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು ಸೃಷ್ಟಿಯಾದುದು ನಾಲ್ಕನೆಯ ದಿನ.
ಬೆಳಕು ಎಂದರೇನು? ಯೊವಾನ್ನ ತನ್ನ ಶುಭಸಂದೇಶದಲ್ಲಿ ದೇವರೇ ಬೆಳಕು ಅಥವಾ ಜ್ಯೋತಿ ಎಂದು ವ್ಯಾಖ್ಯಾನಿಸುವುದನ್ನು ಕೇಳುತ್ತೇವೆ. ದೇವರೆಂದರೆ ಬೆಳಕು; ಅವರು ಮೊದಲಿಗೆ ಬೆಳಕನ್ನು ಸೃಷ್ಟಿಸುತ್ತಾರೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಇಡೀ ಸೃಷ್ಟಿಯೇ ಬೆಳಕಿನ ಅಂದರೆ ದೇವರ ಅಭಿವ್ಯಕ್ತಿ ಮತ್ತು ಪ್ರತಿಬಿಂಬ.
ಧರ್ಮಸಭೆ ಕ್ರಿಸ್ತನ ಪುನರುತ್ಥಾನವನ್ನು ಬೆಳಕಿನ ಹಬ್ಬವೆಂದು ಪರಿಗಣಿಸುತ್ತದೆ. ಅದು ವಾರದ ಮೊದಲನೆಯ ದಿನ ಬೆಳಕಿನ ದಿನ. ಆದ್ದರಿಂದ ಪುನರುತ್ಥಾನವು ಮೊದಲ ದಿನದಲ್ಲಿ ಘಟಿಸಿದ ಅಂದರೆ ಕ್ರಿಸ್ತನು ದಿವ್ಯ ಬೆಳಕಾದ ದಿನ. ಹೌದು ಪುನರುತ್ಥಾನವೆಂದರೆ ನಿತ್ಯಜೀವನದ ದಿವ್ಯ ಪ್ರಜ್ಞೆ. ಜೀವನದ ಗುರಿಯನ್ನು ಪೂರೈಸಿದ ಪ್ರತಿಯೊಬ್ಬರು ಆಕಾಶದ ಬೆಳಕಾಗುತ್ತಾರೆ. ಅವರು ಬೆಳಕಿನ ದಿನವನ್ನು ಪ್ರವೇಶಿಸಿ ನಕ್ಷತ್ರರಾಗುತ್ತಾರೆ.