ದೇಶವ ಕೆಡವಿ ಮಂದಿರ ಕಟ್ಟುವುದು
ಸುಲಭದ ಮಾತಲ್ಲ …!
ಕಟ್ಟಿದ ಮಳೆಬಿಲ್ಲುಗಳಿಗೆ
ಮಸಿ ಬಳಿಯಬೇಕು
ದೇಶ ಕಂಡ ಕನಸುಗಳಿಗೂ
ತೆರಿಗೆ ವಿಧಿಸಬೇಕು !
ಸೇತುವೆಗಳ ಮುರಿದು ಗೋಡೆಗಳ ಕಟ್ಟುವುದು
ಸುಲಭದ ಕೆಲಸವಲ್ಲ…!
ಕೊಯ್ಲಿಗೆ ಬಂದ ಪೈರು ಹೊಲಗಳ
ಹರಾಜಿಗೆ ಇಡಬೇಕು
ಯಾರಿಗೋ ಹುಟ್ಟಿದ ಕೂಸುಗಳಿಗೆ
ತನ್ನ ಹೆಸರಿಡಬೇಕು
ಮಾನವತೆಯ ಒಡೆದು ಮೂರ್ತಿಗಳ ನಿಲ್ಲಿಸುವುದು
ಸುಲಭದ ಮಾತಲ್ಲ… !
ಹಾರೋ ಹಕ್ಕಿಗಳ ಹಿಡಿದು
ಪಂಜರದೊಳು ಬಂಧಿಸಬೇಕು
ತನ್ನ ಮನೆಯ ಮಾಳಿಗೆಗೆ
ತಾನೇ ಕಲ್ಲು ಹೊಡೆಯಬೇಕು
ಡೇವಿಡ್ ಕುಮಾರ್. ಎ