
ದುಷ್ಟಶಕ್ತಿಯನ್ನು ನಮ್ಮಿಂದ ಬಡಿದೋಡಿಸಲು ಪ್ರಾರ್ಥನೆ ನಮಗೆ ಬಹು ಮುಖ್ಯ. ಆಷ್ಟುಮಾತ್ರವಲ್ಲ ಪ್ರಾರ್ಥನೆ ನಮ್ಮಲ್ಲಿ ಭಗವಂತನ ಶಕ್ತಿಯನ್ನು ಅಂದರೆ ದೈವಿಕ ಶಕ್ತಿಯನ್ನು ತುಂಬಿಸುತ್ತದೆ. ಆ ಆತ್ಮಿಕ ಶಕ್ತಿ ದುಷ್ಟ ಶಕ್ತಿಯ ವಿರುದ್ಧ ಹೋರಾಡಲು ನಮಗೆ ಬಲ ನೀಡುತ್ತದೆ, ಪ್ರಾರ್ಥನೆಯಿಂದ ದೇವರೊಂದಿಗೆ ಆತ್ಮೀಯತೆ ಸಾಧಿಸಲು ಸಾಧ್ಯ ಮತ್ತು ಆದರ ಭಾವ ನಮ್ಮಲ್ಲಿ ನಿರ್ಮಾಣವಾಗಲು, ಕಾರ್ಯದಲ್ಲಿ ಯಶಸ್ಸು ಗಳಿಸಲು, ಮನಃಶಾಂತಿ ಮತ್ತು ದೇವರೊಂದಿಗೆ ಅನುಸಂಧಾನ ಸಾಧಿಸಲು ಮತ್ತು ದೇವರ ಬಗ್ಗೆ ಶ್ರದ್ಧೆಭಾವ ನಿರ್ಮಿಸಿಕೊಳ್ಳಲು ಪ್ರಾರ್ಥನೆ ಮುಖ್ಯ.
ಊರಿನಲ್ಲಿ ಮಳೆ ಬೀಳದೆ ಬರಗಾಲ ವಕ್ಕರಿಸಿಕೊಂಡಿತ್ತು. ಮಳೆಗೊಸ್ಕರ ಪ್ರಾರ್ಥಿಸಲು ಊರಿನ ಜನರು ಸಾಮೂಹಿಕ ಪ್ರಾರ್ಥನೆಯನ್ನು ಏರ್ಪಡಿಸಿದ್ದರು. ಆ ಕ್ಷಣವೇ ಮಳೆಬೇಕೆಂದು ಪ್ರಾರ್ಥಿಸಲು ಬಂದ ಜನರು ಕೊಡೆಗಳಿಲ್ಲದೆ ಬಂದಿದ್ದರು. ಒಬ್ಬ ಪುಟ್ಟ ಹುಡುಗಿಯನ್ನು ಬಿಟ್ಟು.
ಪ್ರಾರ್ಥನೆ ಶಬ್ದವು ‘ಪ್ರ’ ಅಂದರೆ ಪ್ರಕರ್ಷವಾಗಿ ಮತ್ತು ‘ಅರ್ಥ’ ಅಂದರೆ ‘ಯಾಚಿಸುವುದು’ ಶಬ್ದಗಳಿಂದ ರೂಪುಗೊಂಡಿದೆ. ಪ್ರಾರ್ಥನೆ ಎಂದರೆ ಬೇಡಿಕೆಯಲ್ಲ ಅದು ಆತ್ಮದ ನಿವೇದನೆ. ಪ್ರಾರ್ಥನೆಯಲ್ಲಿ ಪದಗಳಿಲ್ಲದಿದ್ದರೂ ಸರಿಯೇ ಹೃದಯ ಇರಬೇಕು. ಹೃದಯವೇ ಇಲ್ಲದೆ ಬರೀ ಪದಗಳ ಅಬ್ಬರವು ಪ್ರಾರ್ಥನೆ ಎನಿಸದು” ಎಂದು ಮಹಾತ್ಮ ಗಾಂಧೀಜಿೆಯವರು ಹೇಳುತ್ತಾರೆ.
ಭಕ್ತರನ್ನು ನಾಲ್ಕು ವಿಧವಾಗಿ ವರ್ಗೀಕರಿಸಬಹುದು;
ಆರ್ತ ಭಕ್ತರು, ಅರ್ಥಾರ್ಥಿ ಭಕ್ತರು, ಜಿಜ್ಞಾಸು ಭಕ್ತರು, ಜ್ಞಾನಿ ಭಕ್ತರು.
ಆರ್ತಭಕ್ತರು:
ನರಳುವಿಕೆ, ಕಷ್ಟನಷ್ಟ ಇತ್ಯಾದಿ ಜೀವನದ ನೋವುಗಳಿಗೆ ತುತ್ತಾದವರು ದೇವರನ್ನು ತನ್ನ ಕಷ್ಟ ನಿವಾರಣೆಗಾಗಿ ಮೊರೆಹೋಗುತ್ತಾರೆ. ಈ ವಿಧದ ಭಕ್ತರನ್ನು ಆರ್ತ ಭಕ್ತರು ಎನ್ನಬಹುದು.
ಅರ್ಥಾರ್ಥಿ ಭಕ್ತರು:
ತನ್ನ ಲೌಕಿಕ ಸುಖಕ್ಕಾಗಿ ವಸ್ತು, ಧನ, ಕನಕಾದಿಗಳನ್ನು ಬಯಸಿ ದೇವರ ಮರೆ ಹೊಗುವವರನ್ನು ಅರ್ಥಾರ್ಥಿ ಭಕ್ತರು ಎನ್ನುತ್ತಾರೆ.
ಜಿಜ್ಞಾಸು ಭಕ್ತರು
ಇವರು ಜೀವನದ ಗುರಿಯನ್ನು ಅರಸುವವರು. ಜೀವನದ ಪರಮಗುರಿಯೆಂದು ಭಗವಂತನನ್ನು ಇರಿಸಿಕೊಂಡು ಆತನ ಕುರಿತಾದ ಜ್ಞಾನವನ್ನು ಪಡೆಯಲು ಪ್ರಯತ್ನಿಸುವವರನ್ನು ಜಿಜ್ಞಾಸು ಭಕ್ತರು ಎನ್ನಬಹುದು.
ಜ್ಞಾನಿ ಭಕ್ತರು
ಇವರೆಲ್ಲರಿಗಿಂತ ಮೇಲಿನವರು. ಜೀವನ-ಜಗತ್ತು, ಭಗವಂತ ಈ ಸಂಬAಧದ ಸತ್ಯವಾದ ಪರಿಜ್ಞಾನವನ್ನು ಹೊಂದಿ, ಸರ್ವರಲ್ಲೂ, ಸರ್ವವಸ್ತುಗಳಲ್ಲೂ ಭಗವಂತನನ್ನು ಕಾಣುತ್ತಾ, ಯಾವ ಕಾಮನೆಗಳೂ ಇಲ್ಲದೆ ಭಗವಂತನನ್ನು ಪೂಜಿಸುತ್ತಾ ಇರುವವರನ್ನು ಜ್ಞಾನಿ ಭಕ್ತರು ಎಂದು ಹೇಳುತ್ತಾರೆ.
– ಅನು