ನೀನೇ ಮೌನಜಂಗಮನು

Advertisements
Share

 

ನೂರು ಗೌಜು -ಗದ್ದಲಗಳ
ಸಾವಿರ ವಾದ-ವಾಗ್ವಾದಗಳ
ನಡುವೆಯೂ
ನಿನ್ನ ಮೆದುನಡಿಗೆಯ ನೆರಳು
ಹೊರಟಿದೆ ಮೂಕಮೆರವಣಿಗೆ
ಸಬುದ ನಾದದ ಹೆಸರ ತೊರೆದು
ನುಡಿದ ನಿನ್ನುಡಿಗೆ
ನಿಡಿದ ನಿನ್ನುಸಿರಿಗೆ
ಅಪಾರ್ಥದ ವಿಪರೀತ ಅರ್ಥಗಳು
ಬಸುರ ತುಂಬ ವಿಷವ ಹೊತ್ತು
ಹೊಂಕರಿಸುವ ನೆಲದ ರಣಹದ್ದುಗಳು

ನಿನ್ನ ಧರ್ಮದ ಬಲವು ಅಧ್ಯಾತ್ಮದ
ಒಲವು
ಕಳಚಿಬಿದ್ದ ಗಳಿಗೆ
ಬಯಲ ತುಂಬಾ
ಕಂಪಿಸುವ ಶೋಕತಪ್ತ
ಮಳೆದುಂಬಿಗಳು
ಕಲಿಸಿದ ಜೀವನದ ಶುಚಿಯು
ಬದುಕಿನ ರುಚಿಯು
ಗುಡಿಸಿ ಹಾಕಿದೆ
ಬೀದಿ- ಕೇರಿಯ ಕೊಚ್ಚೆ ಕೊಳೆಯನು

ನೀ ನಿವೃತ್ತನಾದರೂ

ಶತಮಾನದ ಅನುಮಾನಕ್ಕೆ
ತುತ್ತಾದರೂ
ನಿಜಪ್ರೇಮದ ಹಾಡಿಯಲಿ
ನಡೆಯುತ್ತಲೇ ಇರುವೆ
ಕೋಲು ಹಿಡಿದು

ಬಾಗಿದ ಬೆನ್ನು
ಇನ್ನೆಂದೂ ಮುಖ ತೋರಿಸಲಾರೆ
ಎಷ್ಟೇ ಅಂದರೂ
ಬೆನ್ನು ಬಿಡರು ದುಂದುಮಾರರು

ಏನಾದರೂ
ನೀನೇ ಮೌನಜಂಗಮನು
ನೊಂದವರಿಗೂ
ನಿನ್ನ ಕೊಂದವರಿಗೂ

 

ಡಾ ದಿನೇಶ್ ನಾಯಕ್
ಸಹಾಯಕ ಪ್ರಾಧ್ಯಾಪಕರು
ಸಂತ ಅಲೋಶಿಯಸ್ ಕಾಲೇಜು(ಸ್ವಾಯತ್ತ)
ಮಂಗಳೂರು-575003
9449255056

ನಿಮ್ಮ ಪ್ರತಿಕ್ರಿಯೆ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Resize text-+=
Follow by Email
Facebook
Twitter
YouTube
Instagram